*ಅರಭಾವಿ ಬಿಜೆಪಿ ಮಂಡಲದಿಂದ ಶಿವ- ಬಸವ ಜಯಂತಿ ಆಚರಣೆ*
*ಗೋಕಾಕ*- ಜಾತಿ ವ್ಯವಸ್ಥೆ ಮತ್ತು ಮೂಢ ನಂಬಿಕೆಗಳನ್ನು ವಿರೋಧಿಸಿ, ಎಲ್ಲರೂ ಸಮಾನರು. ಯಾರ ಮನೆಯಲ್ಲಿಯೂ ಜಾತಿ, ಬೇಧವಿಲ್ಲ ಎಂಬುದನ್ನು ಬಸವಣ್ಣನವರು ನಿರೂಪಿಸಿದ್ದರು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಸೋಮವಾರ, ಇಲ್ಲಿಯ ಎನ್ಎಸ್ಎಫ್ ಕಚೇರಿಯಲ್ಲಿ ಅರಭಾವಿ ಬಿಜೆಪಿ ಮಂಡಲವು ಆಯೋಜಿಸಿದ್ದ ಛತ್ರಪತಿ ಶಿವಾಜಿ ಮತ್ತು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದರು ಎಂದು ಅವರು ತಿಳಿಸಿದರು.

ಜಾತಿ, ಮತ, ಲಿಂಗಗಳ ಬೇಧವನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಬಸವಣ್ಣನವರು ಕಾರಣರಾಗಿದ್ದರು. ಇದೇ ಕಾರಣದಿಂದ ಬಸವಣ್ಣನವರನ್ನು ನಾವೆಲ್ಲ ಮಹಾ ಮಾನವತಾವಾದಿ ಎಂದು ಕರೆಯುತ್ತೇವೆ. ವಚನಗಳ ಮೂಲಕವೇ ಸರಳ ಭಾಷೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದರು. ಅವರ ತತ್ವಾದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.

ಹಿಂದವೀ ಸ್ವರಾಜ್ಯದ ಸ್ಥಾಪಕ ಶಿವಾಜೀ ಮಹಾರಾಜರು ದಕ್ಷ ಆಡಳಿತಗಾರರಾಗಿದ್ದರು. ಅಪ್ರತಿಮ ಧೈರ್ಯ ಹೊಂದಿದ್ದರು. ಜತೆಗೆ ದೂರದೃಷ್ಟಿಯಿಂದ ಭಾರತೀಯ ಇತಿಹಾಸದ ಪುಟಗಳಲ್ಲಿ ಮಹಾನ್ ದೇಶಪ್ರೇಮಿಯಾಗಿ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಆದಿಲ್ ಷಾ, ಮೊಘಲರ ದಬ್ಬಾಳಿಕೆಯ ವಿರುದ್ಧ ಹೋರಾಟವನ್ನು ಮಾಡಿ ಅವರಿಂದ ಮುಕ್ತಿ ಹೊಂದಿ ರಾಯಗಡವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯಭಾರ ಮಾಡಿರುವ ಕೀರ್ತಿಗೆ ಛತ್ರಪತಿ ಶಿವಾಜಿ ಮಹಾರಾಜರು ಭಾಜನರಾಗಿದ್ದರು. ಬಸವಣ್ಣ, ಕಿತ್ತೂರು ಚೆನ್ನಮ್ಮ, ರಾಯಣ್ಣ, ಶಿವಾಜಿ, ಭಗೀರಥ, ಅಂಬೇಡ್ಕರ್ ಅವರಂತಹ ಮಹಾನ್ ಪುರುಷರನ್ನು ಆಯಾ ಜಾತಿ, ಧರ್ಮಗಳಿಗೆ ಹೋಲಿಸುವುದು ಸರಿಯಲ್ಲ. ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪ್ರತಿಪಾದಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿಶ್ವಜ್ಯೋತಿ, ಸಮಾನತೆಯ ಹರಿಕಾರ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ, ಅಡಿವೆಪ್ಪ ಬಿಲಕುಂದಿ, ಪ್ರಮೋದ ನುಗ್ಗಾನಟ್ಟಿ, ಸಂಜು ಹೊಸಮನಿ, ಪಾಂಡು ಮಹೇಂದ್ರಕರ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA