ಬೆಳಗಾವಿ: ಬೆಳಗಾಂ ಶುಗರ್ಸ್ ಪ್ರೈ.ಲಿ ಸಕ್ಕರೆ ಕಾರ್ಖಾನೆಗೆ 2024-25 ನೇ ಸಾಲಿನ ಉತ್ತರ ಕರ್ನಾಟಕ ವಲಯದ ಅತ್ಯುತ್ತಮ ತಾಂತ್ರಿಕ ಕಾರ್ಯನಿರ್ವಹಣೆ ಪ್ರಶಸ್ತಿಯನ್ನು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ನೀಡಿ ಗೌರವಿಸಿದೆ.
ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ನಿರ್ದೇಶನಾಲಯ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶನಿವಾರ 16 ರಂದು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಸಭಾಂಗಣದಲ್ಲಿ ಜರುಗಿದ 19ನೇ ವಾರ್ಷಿಕ ಸರ್ವ ಸಾಧಾರಣಾ ಮಹಾಸಭೆಯಲ್ಲಿ ಬೆಳಗಾಂ ಶುಗರ್ಸ್ ಪ್ರೈ.ಲಿ ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ರವರಾದ ಪ್ರದೀಪಕುಮಾರ ಇಂಡಿ, ಹಿರಿಯ ಉಪಾಧ್ಯಕ್ಷರಾದ ಎಲ್.ಆರ್.ಕಾರಗಿ ಮತ್ತು ತಾಂತ್ರಿಕ ವಿಭಾಗದ ಉಪಾಧ್ಯಕ್ಷರಾದ ಎ.ಎಸ್.ರಾಣಾ ಪ್ರಶಸ್ತಿ ಸ್ವೀಕರಿಸಿದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಸಕ್ಕರೆ ಉದ್ಯಮದ ಮತ್ತು ಕಬ್ಬು ಬೆಳೆಯ ಕುರಿತು ವಿಶೇಷ ಅಧ್ಯಯನ, ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದ ಪದವಿ ಕೋರ್ಸಗಳು, ತಾಂತ್ರಿಕ ಅಭಿವೃದ್ದಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಕ್ಕರೆ ಉದ್ಯಮಕ್ಕೆ ಅತ್ಯಮೂಲ್ಯ ಕೊಡುಗೆಯನ್ನು ನೀಡಿ ಕರ್ನಾಟಕದ ಎಲ್ಲ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗಿದೆ.
ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯು ಏಳ್ಗೆಯನ್ನು ಸಾಧಿಸುತ್ತಿದ್ದು, ಕಾರ್ಖಾನೆಯ ಚೇರಮನ್ ಮತ್ತು ಸಿ.ಎಫ್.ಓ ರವರಾದ ಪ್ರದೀಪಕುಮಾರ ಇಂಡಿ ಅವರ ನೇತೃತ್ವದ ಆಡಳಿತ ಮಂಡಳಿಯ ನಿರ್ಣಯ, ರೈತ ಭಾಂದವರ ಸಹಕಾರ, ಅಧಿಕಾರಿಗಳ ಮತ್ತು ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಈ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಬೆಳಗಾಂ ಶುಗರ್ಸ್ ಹಿರಿಯ ಉಪಾಧ್ಯಕ್ಷರಾದ ಎಲ್.ಆರ್.ಕಾರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA