ಬೆಳಗಾವಿ : ವಿಧಾನಸಭೆಯ ಅಧಿವೇಶನದಲ್ಲಿ *ಜಂಗಮ ಸಮಾಜದ ಆರ್ಥಿಕ ಸಂಕಷ್ಟಗಳನ್ನು* ಎಳೆಎಳೆಯಾಗಿ ಬಿಚ್ಚಿಟ್ಟು, ಸಮಾಜದ ಏಳಿಗೆಗಾಗಿ *”ಜಂಗಮ ಅಭಿವೃದ್ಧಿ ನಿಗಮ”* ಸ್ಥಾಪಿಸಬೇಕೆಂದು ಪ್ರಬಲವಾಗಿ ಒತ್ತಾಯಿಸಿದ ಕಲಬುರಗಿ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕ *ಶ್ರೀ ಅಲ್ಲಮಪ್ರಭು ಪಾಟೀಲ್* ಅವರ ನಡೆ ಅತ್ಯಂತ ಸ್ತುತ್ಯಾರ್ಹ ಮತ್ತು ಐತಿಹಾಸಿಕ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲದ ನಿರ್ದೇಶಕರು ಹಾಗೂ ಜಂಗಮ ಸಮಾಜದ ಮುಖಂಡರಾದ *ಡಾ. ಸಂಜಯ ಹೊಸಮಠ ಅವರು ಪ್ರಶಂಸಿಸಿದ್ದಾರೆ.*
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, *”ಜಂಗಮ ಸಮಾಜವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ, ಆರ್ಥಿಕವಾಗಿ ಇಂದು ಕಡು ಕಷ್ಟದಲ್ಲಿದೆ.* ಹಿಂದೆ ಹಳ್ಳಿಗಳಲ್ಲಿ ಬೆಳಗಿನ ಜಾವ ಜಾಗೃತಿ ಮೂಡಿಸುತ್ತಿದ್ದ ಈ ಸಮಾಜ, ಬದಲಾದ ಕಾಲಘಟ್ಟದಲ್ಲಿ ಜೀವನೋಪಾಯಕ್ಕಾಗಿ ಪರದಾಡುತ್ತಿದೆ. ಇಂತಹ ಸಮುದಾಯದ ನೈಜ ಸ್ಥಿತಿಯನ್ನು ಅರ್ಥಮಾಡಿಕೊಂಡು, *ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ* ಅತ್ಯಂತ ಗಂಭೀರವಾಗಿ ಧ್ವನಿ ಎತ್ತಿದ ಏಕೈಕ ಶಾಸಕರು ಅಲ್ಲಮಪ್ರಭು ಪಾಟೀಲರು,” ಎಂದು ಹೆಮ್ಮೆಯಿಂದ ಹೇಳಿದ್ದಾರೆ.
”ಸಮಾಜದ ಪರವಾಗಿ ನೀಡಿದ್ದ ಮನವಿಯನ್ನು ಗೌರವಿಸಿ, ಅದನ್ನು ಸದನದ ಗಮನಕ್ಕೆ ತರುವ ಮೂಲಕ ಶಾಸಕರು ಜಂಗಮ ಕುಲದ ಆಶಾಕಿರಣವಾಗಿದ್ದಾರೆ. ಈ ಸಮುದಾಯಕ್ಕೆ ನ್ಯಾಯ ಒದಗಿಸಲು ಅವರು ತೋರುತ್ತಿರುವ ಬದ್ಧತೆ ಅಭಿನಂದನಾರ್ಹ. ರಾಜ್ಯ ಸರ್ಕಾರವು ಇವರ ಆಗ್ರಹವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡಬೇಕು,” ಎಂದು ಡಾ. ಸಂಜಯ ಹೊಸಮಠ ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಶಾಸಕರ ಈ ಜನಪರ ಕಾಳಜಿಗೆ ಇಡೀ ಜಂಗಮ ಸಮಾಜವು ಸದಾ ಋಣಿಯಾಗಿರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
CKNEWSKANNADA / BRASTACHARDARSHAN CK NEWS KANNADA