ಗೋಕಾಕ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶವನ್ನು ವಿಶ್ವಗುರುವಾಗಿಸಲು ಕಾರ್ಯಪ್ರವೃತ್ತರಾಗಿದ್ದಾರೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ ಹೇಳಿದರು.

ಅವರು, ತಾಲೂಕಿನ ಸುಲಧಾಳ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶತಮಾನದ ಸಂಭ್ರಮ ಮತ್ತು ಗುರುವಂದನಾ ಸಮಾರಂಭದಲ್ಲಿ ನೂತನ ಕೊಠಡಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಭಗವಂತ ಮಕ್ಕಳಿಗೆ ನೀಡಿದ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವಲ್ಲಿ ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ದೇಶದ ಕಟ್ಟ ಕಡೆಯ ಮಕ್ಕಳಿಗೂ ಶಿಕ್ಷಣ ನೀಡುವ ಪ್ರಧಾನಿ ಮೋದಿಯವರ ಕಾರ್ಯಕ್ಕೆ ನಾವೆಲ್ಲ ಸಹಕಾರ ನೀಡೋಣ. ಶಿಕ್ಷಣ ಪ್ರೇಮಿಗಳಾದ ಶಾಸಕರುಗಳಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ತಮ್ಮ ಕ್ಷೇತ್ರಗಳಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಮಹತ್ವ ನೀಡಿ ಶ್ರಮಿಸುತ್ತಿರುವದು ಮಾದರಿಯಾಗಿದೆ ಎಂದರು.
ಆ ದೇವರು ನೀಡಿದ್ದರಲ್ಲಿ ಸಮಾಜಕ್ಕೆ ಏನಾದರು ಕೊಡುಗೆಯನ್ನು ನೀಡಿ ಸಮಾಜದ ಋಣ ತೀರಿಸಬೇಕು. ಅಂತಹ ಕಾರ್ಯವನ್ನು ಈ ಗ್ರಾಮದ ಹಿರಿಯರು ಮಾಡಿದ್ದರಿಂದಲೆ ಸ್ವತಂತ್ರ ಪೂರ್ವದಿಂದಲೆ ಈ ಶಾಲೆ ಸ್ಥಾಪನೆಗೊಂಡು ಹಲವಾರು ಸಾಧಕರನ್ನು ನಾಡಿನ ಸೇವೆಗೆ ನೀಡಿದ್ದು ಹೆವ್ಮ್ಮೆಯ ಸಂಗತಿ. ಈ ಗ್ರಾಮಕ್ಕೆ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ಮಹಾನ ವ್ಯಕ್ತಿಗಳು ಈ ಪುಣ್ಯ ನೆಲದ ಪಾದ ಸ್ಪರ್ಶ ಮಾಡಿದ್ದನ್ನು ಸ್ಮರಿಸಿದ ಅವರು, ಈ ಗ್ರಾಮದಿಂದ ಇನ್ನು ಹೆಚ್ಚಿನ ಸಮಾಜಕ್ಕೆ ಕೊಡುಗೆ ಸಿಗಲಿ ಇದಕ್ಕೆ ನಮ್ಮ ಸಹಕಾರ ಸದಾ ನೀಡುವದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಕ್ಷರ ದೇಗುಲ ಸ್ಮರಣ ಸಂಚಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಸಚಿವರು ಹಾಗೂ ಶಾಸಕರು ಲೋಕಾರ್ಪಣೆ ಮಾಡಿದರು.
ಸಮಾರಂಭವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಳಗಾವಿಯ ರುದ್ರಾಕ್ಷಿ ಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಯವರು ವಹಿಸಿದ್ದರು.
ವೇದಿಕೆಯ ಮೇಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ ಸಿಂಗ, ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ, ಗ್ರಾಪಂ ಅಧ್ಯಕ್ಷೆ ಸುಶೀಲವ್ವಾ ಕೆಂಪನ್ನವರ, ಗ್ರಾಮದ ಹಿರಿಯರಾದ ಬಾಳಗೌಡ ಪಾಟೀಲ, ಗೋವಿಂದ ದೇಶಪಾಂಡೆ, ಭೀಮಗೌಡ ಪೋಲಿಸಗೌಡರ, ಬಸವರಾಜ ನಂದಿ, ಭೀಮಶಿ ಬಡ್ಲಂಗೋಳ, ಎಮ್ ಬಿ ಗುತ್ತಿ, ಎ ಎನ್ ಮೊದಗಿ, ಆರ್ ವೈ ಸನದಿ, ಸುರೇಶ ಬೆಟಗೇರಿ, ಗುತ್ತೆಪ್ಪ ಸನದಿ, ಶಂಕರ ಬಾವಿಕಟ್ಟಿ ಇದ್ದರು.
CKNEWSKANNADA / BRASTACHARDARSHAN CK NEWS KANNADA